೨೦೦೪ ರ ಅಕ್ಟೋಬರ್-ನವಂಬರ್ ತಿಂಗಳು ಕನ್ನಡ ಚಿತ್ರರಂಗದ ಇತಿಹಾಸದಲ್ಲೊಂದು ಮಹತ್ತರವಾದ ತಿರುವು. ಅದು ಕನ್ನಡೇತರ ಚಿತ್ರಗಳು ಆಯಾ ರಾಜ್ಯಗಳಲ್ಲಿ ಬಿಡುಗಡೆಯಾದ ೭ ವಾರಗಳ ನಂತರ ಕರ್ನಾಟಕದಲ್ಲಿ ಬಿಡುಗಡೆಯಾಗಬೇಕೆಂಬ ಪ್ರಯೋಗ. ಇದರಿಂದ ಕನ್ನಡ ಚಿತ್ರಗಳಿಗೆ ಉಪಯೋಗವಾಗುತ್ತದೆ ಎಂದು ಚಿತ್ರರಂಗದ ಹಿತೈಷಿಗಳು ಅಭಿಪ್ರಾಯಪಟ್ಟರು. ೭ ವಾರಗಳ ನಿರ್ಬಂಧದ ಜೊತೆಗೆ ಕರ್ನಾಟಕದಾದ್ಯಂತ ಪರಭಾಷೆ ಚಿತ್ರಗಳು ೬ ಕ್ಕಿಂತ ಹೆಚ್ಚು ಪ್ರಿಂಟ್ ಗಳನ್ನು ಹಾಕಬಾರದೆಂಬ ಒತ್ತಾಯವೂ ಇತ್ತು. ಇದರಿಂದ ಕನ್ನಡ ಚಿತ್ರಗಳಿಗೆ ಹೆಚ್ಚು ಚಿತ್ರಮಂದಿರಗಳು ದೊರಕುವ ಅನುಕೂಲವಿತ್ತು. ಈ ವಿಷಯವಾಗಿ ಕರ್ನಾಟಕ ರಕ್ಷಣಾ ವೇದಿಕೆ ತನ್ನ ಸಂಪೂರ್ಣ ಬೆಂಬಲವನ್ನು ಕನ್ನಡ ಚಿತ್ರೋದ್ಯಮಕ್ಕೆ ತೋರಿಸಿತು. ಒಟ್ಟಾರೆ ಕರ್ನಾಟಕ ರಕ್ಷಣಾ ವೇದಿಕೆ ತನ್ನನ್ನು ಈ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿತ್ತು.
ಕರ್ನಾಟಕ ರಕ್ಷಣಾ ವೇದಿಕೆ ಈ ನಿಟ್ಟಿನಲ್ಲಿ ಮಾಡಿದ ಹೋರಾಟ ಹಾಗು ಅದರ ಫಲಶ್ರುತಿ :
೧. ಬೆಂಗಳೂರಿನ "ಕಾವೇರಿ" ಚಿತ್ರಮಂದಿರದಲ್ಲಿ ಹಿಂದಿ ಚಿತ್ರ "ವೀರ್ ಜಾರ" ಬಿಡುಗಡೆ ಮಾಡುವುದಾಗಿ ಚಿತ್ರಮಂದಿರ ಸಿಬ್ಬಂದಿ ತೀರ್ಮಾನಿಸಿದರು. ಪರಭಾಷಾ ಚಿತ್ರಗಳ ವಿರುದ್ಧ ೭ ವಾರಗಳ ನಿರ್ಬಂಧವಿದ್ದರೂ ಚಿತ್ರ ಬಿಡುಗಡೆ ಮಾಡುತ್ತಿರುವುದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಿಡಿದೆದ್ದರು. ಚಿತ್ರಮಂದಿರದ ಮುಂದೆ ಕನ್ನಡಾಭಿಮಾನಿಗಳ ಸರಪಳಿ ಮಾಡಿ ಚಿತ್ರಮಂದಿರಕ್ಕೆ ಹೋಗದಂತೆ ಜನರನ್ನು ತಡೆಯಲು ಪ್ರಯತ್ನಿಸಿದರು. ಇವೆಲ್ಲದರ ನಡುವೆ ಕರ್ನಾಟಕ ರಕ್ಷಣಾ ವೇದಿಕೆಯ ಕೆಚ್ಚೆದೆಯ ಕನ್ನಡಿಗನೊಬ್ಬ ಚಿತ್ರಮಂದಿರದ ಧೋರಣೆ ವಿರೋಧಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದನು. ಕನ್ನಡಕ್ಕಾಗಿ, ಕನ್ನಡದ ಉಳಿವಿಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸುವುದಿಲ್ಲವೆಂಬ ಅಂಶವನ್ನು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಿರೂಪಿಸಿದರು.
೨. ಇದೇ ಹಿಂದಿ ಚಿತ್ರ ""ವೀರ್ ಜಾರ" ವನ್ನು ಬೆಂಗಳೂರಿನ "ಅಭಿನಯ" ಚಿತ್ರಮಂದಿರದಲ್ಲೂ ಪ್ರದರ್ಶಿಸುತ್ತಿದ್ದರು. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಚಿತ್ರಮಂದಿರದೊಳಗೆ ನುಗ್ಗಿ ಪರದೆಯನ್ನು ಹರಿದು ಹಾಕಿ ಚಿತ್ರಮಂದಿರದ ಸಿಬ್ಬಂದಿಯನ್ನು ಎಚ್ಚರಿಸಿ ಬಂದರು.
೩. ಅಕ್ಟೋಬರ್ ೧೨ ರಂದು ಬೆಂಗಳೂರಿನ "ವೈಭವ್" ಚಿತ್ರಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ "ವೀರ್ ಜಾರ" ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಲಿಲ್ಲ.
೪. ಕನ್ನಡಿಗರು ಪರಭಾಷಾ ಚಿತ್ರಗಳಿಗೆ ನಿರ್ಬಂಧ ಹಾಕಿರುವ ಕಾರಣ ಬಳ್ಳಾರಿಯಲ್ಲಿ ತೆಲುಗರು ಕನ್ನಡದ "ಕಲಾಸಿಪಾಳ್ಯ" ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡಲಿಲ್ಲ. ಹಾಗೆಯೇ ತೆಲುಗು ನಟ ಚಿರಂಜೀವಿ ಅಭಿನಯದ ಒಂದು ತೆಲುಗು ಚಿತ್ರ ಬಿಡುಗಡೆ ಮಾಡಲು ಯತ್ನಿಸಿದರು. ಈ ವಿಷಯವಾಗಿ ಕರ್ನಾಟಕ ರಕ್ಷಣಾ ವೇದಿಕೆ ಬೃಹತ್ ಪ್ರತಿಭಟನೆ ಮಾಡಿ ಕಲಾಸಿಪಾಳ್ಯ ಚಿತ್ರ ತೆರೆ ಕಾಣುವಂತೆ ಮಾಡಿತು.
೫. ಬೆಂಗಳೂರಿನ "ಮೂವೀಲ್ಯಾಂಡ್" ಚಿತ್ರಮಂದಿರದಲ್ಲಿ ತೆಲುಗು ಚಿತ್ರ ಬಿಡುಗಡೆ ಮಾಡಲು ಹೊರಟಾಗ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅದನ್ನು ವಿರೋಧಿಸಿ ಚಿತ್ರ ಬಿಡುಗಡೆಯಾಗದಂತೆ ನೋಡಿಕೊಂಡರು.
೬. ಈ ವಿಷಯವಾಗಿ ಅಕ್ಟೋಬರ್ ೯ ರಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಗಳೂರಿನ "ಇನ್ನೊವೇಟಿವ್ ಮಲ್ಟಿಪ್ಲೆಕ್ಸ್" ಚಿತ್ರಮಂದಿರದ ವಿರುದ್ಧ ಪ್ರತಿಭಟಿಸಿ ಚಿತ್ರಮಂದಿರಕ್ಕೆ ಲಗ್ಗೆ ಹಾಕಿದರು.