ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ನೇಮಿಸಿರುವ ಸುರಕ್ಷತಾ ಸಿಬ್ಬಂದಿ ಮತ್ತು ಹಲವು ಇತರ ಸಿಬ್ಬಂದಿಗಳು ಪರಭಾಷಿಕರಾಗಿದ್ದು, ಕನ್ನಡ ಮತ್ತು ಕನ್ನಡಿಗರ ಬಗ್ಗೆ ಲಘುವಾಗಿ ಮಾತಾಡುವ, ಕನ್ನಡ ವಿರೋಧಿ ಧೋರಣೆಯುಳ್ಳವರಾಗಿದ್ದು, ಇತ್ತೀಚೆಗೆ ಟಿ.ವಿ. ಚಾನೆಲ್ ಒಂದರ ಸಂದರ್ಶನದಲ್ಲಿ ಮೆಟ್ರೋ ಸಿಬ್ಬಂದಿಯೊಬ್ಬರು ಕನ್ನಡಿಗರಿಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡಿ, ಹಿಂದಿ ರಾಷ್ಟ್ರಭಾಷೆಯೆಂಬ ಸುಳ್ಳನ್ನೇ ಮುಂದಿಟ್ಟುಕೊಂಡು ತಾವು ಹಿಂದಿಯಲ್ಲೇ ಮಾತಾಡುವುದಾಗಿ, ಕನ್ನಡಿಗರೂ ಹಿಂದಿ ಕಲಿಯಬೇಕೆಂಬ ಉದ್ಧಟತನದಿಂದ ಮಾತಾಡಿದರು. ಇಷ್ಟೇ ಅಲ್ಲದೆ, ಕೇಂದ್ರದ ತ್ರಿಭಾಷಾ ಸೂತ್ರ ಎಂಬ ಅಸಂಬದ್ಧ ನೆಪವೊಡ್ಡಿ, ಇಡೀ ಮೆಟ್ರೋ ವ್ಯವಸ್ಥೆಯಲ್ಲಿ ಎಲ್ಲ ಕಡೆ ಹಿಂದಿ ನಾಮಫಲಕಗಳು, ಸೂಚನಾಫಲಕಗಳನ್ನು ಹಾಕಲು ಮತ್ತು ಘೋಷಣೆಗಳನ್ನು ಹಿಂದಿಯಲ್ಲಿ ಕೂಗಲು ನಮ್ಮ ತೆರಿಗೆ ಹಣವನ್ನು ಪೋಲು ಮಾಡಿಲಾಗಿದೆ. ಜೊತೆಗೆ, ಇವೆಲ್ಲವುದರ ಮೂಲಕ ಕನ್ನಡಿಗರ ಮೇಲೆ ಹಿಂದಿಯನ್ನು ಹೇರಲಾಗಿದೆ. ಇದರಿಂದ ಬೆಂಗಳೂರಿಗೆ ಬರುವ ಪರಭಾಷಿಕರು ನಮ್ಮ ಮುಖ್ಯವಾಹಿನಿಯಲ್ಲಿ ಬೆರೆಯಲು ಅವಕಾಶವನ್ನೂ ಕೊಡದೆ, ಪರಭಾಷಿಕರ ಅನುಕೂಲಕ್ಕಾಗಿಯೇ ವ್ಯವಸ್ಥೆ ಕಟ್ಟಿ, ಅನಿಯಂತ್ರಿತ ವಲಸೆಯನ್ನು ಮೆಟ್ರೋ ಅಧಿಕಾರಿಗಳು ಉತ್ತೇಜಿಸಿದಂತಾಗಿದೆ ಹಾಗೂ ಕನ್ನಡಿಗರ ಉದ್ಯೋಗಕ್ಕೆ ಕುತ್ತು ತಂದಂತಾಗಿದೆ. ಇವೆಲ್ಲವನ್ನು ಪ್ರಶ್ನೆ ಮಾಡಿದ ಕೆಲವು ಕನ್ನಡಿಗರು ಮೆಟ್ರೋ ಅಧಿಕಾರಿಗಳಿಗೆ ಇದರ ಬಗ್ಗೆ ಸ್ಪಷ್ಟನೆ ಕೇಳಿದರೆ, ಉದ್ಧಟತನದ ಉತ್ತರ ನೀಡಿ, ಅವರು ಕೇಳಿದ್ದೇ ತಪ್ಪು ಎನ್ನುವ ರೀತಿಯಲ್ಲಿ ಪ್ರತಿಕ್ರಯಸಿ, ಕೋರ್ಟಿಗೆ ಹೋಗಿ ಎಂಬ ಬೇಕಾಬಿಟ್ಟಿ ಮತ್ತು ದುರಹಂಕಾರಿ ಧೋರಣೆಯಿಂದ ಉತ್ತರ ನೀಡಿದ್ದನ್ನು ಹಲವು ಕನ್ನಡಿಗರು ನಮ್ಮ ಗಮನಕ್ಕೆ ತಂದಿದ್ದರು.
ಇಂತಹ ಕನ್ನಡ ವಿರೋಧಿ ಧೋರಣೆಯಿರುವ, ಹಿಂದಿ ಹೇರಿಕೆಗೆ ಸೊಪ್ಪು ಹಾಕುವ ನಮ್ಮ ಮೆಟ್ರೋ ವಿರುದ್ಧ ಧ್ವನಿಯೆತ್ತಿ, ಮೆಟ್ರೋದಲ್ಲಿ ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ನೀಡಬೇಕು, ಎಲ್ಲಾ ಹಂತಗಳಲ್ಲಿಯೂ ಕನ್ನಡವನ್ನು ಬಳಸಬೇಕು, ಅನಗತ್ಯವಾದ ಹಿಂದಿ ಬಳಕೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ನಮ್ಮ ವೇದಿಕೆಯಿಂದ ಶಾಂತಿನಗರದಲ್ಲಿರುವ ಬಿ.ಎಂ.ಅರ್.ಸಿ.ಎಲ್ ಮುಖ್ಯ ಕಛೇರಿಯ ಮುಂದೆ ಡಿಸೆಂಬರ್ ೨, ೨೦೧೧ ರಂದು ಪ್ರತಿಭಟನೆ ನಡೆಸಿದೆವು. ಬಿ.ಎಂ.ಅರ್.ಸಿ.ಎಲ್ ನ ಸಂಪರ್ಕಾಧಿಕಾರಿ ಚೌಹಾಣ್ ಅವರಿಗೆ ನಾವು ಸಲ್ಲಿಸಿದ, ನಮ್ಮ ಬೇಡಿಕೆಗಳಿರುವ ಮನವಿ ಪತ್ರದ ಪ್ರತಿಯನ್ನು ಕೆಳಗಡೆ ನೋಡಿ: http://karave.blogspot.com/2011/12/namma-metro-karave-manavi-patra.html ಬಿ.ಎಂ.ಅರ್.ಸಿ.ಎಲ್ ಮುಖ್ಯ ಕಛೇರಿಯ ಮುಂದೆ ನಾವು ನಡೆಸಿದ ಪ್ರತಿಭಟನೆಯ ಕೆಲ ಚಿತ್ರಗಳನ್ನು ಮತ್ತು ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ: http://karave.blogspot.com/2011/12/namma-metro-karave-horata.html http://karave.blogspot.com/2011/12/namma-metro-kannada-virodhitana-bagge.html
|