ಮಕ್ಕಳ ಸಂಖ್ಯೆ ಕಮ್ಮಿ ಎಂಬ ಕುಂಟು ನೆಪವೊಡ್ಡಿ ಸುಮಾರು ೩೦೦೦ ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ನಿರ್ಧರಿಸಿ, ಶಾಲೆಗಳನ್ನು ಮುಚ್ಚಲು ಆರಂಭಿಸಿದ್ದ ರಾಜ್ಯಸರ್ಕಾರ, ಆ ಮೂಲಕ ೨೦೦೯ರ "ಶಿಕ್ಷಣ ಹಕ್ಕು ಕಾಯ್ದೆ" ಅನ್ವಯ ಪ್ರತಿ ಮಗುವಿಗೂ ಸಿಗಬೇಕಿದ್ದ ಮೂಲಭೂತ ಶಿಕ್ಷಣದ ಹಕ್ಕನ್ನು ಕಸಿದುಕೊಂಡಂತಾಗಿತ್ತು.
ಸರ್ಕಾರದ ಈ ಹೊಣೆಗೇಡಿ ನಿರ್ಧಾರದ ವಿರುದ್ಧ ನಿರ್ಧಾರ ಪ್ರಕಟವಾದಾಗಿನಿಂದಲೂ ಹೋರಾಟ ಆರಂಭಿಸಿದ್ದ ನಾವು, ಅಕ್ಟೋಬರ್ ೨೪, ೨೦೧೧ ರಂದು ಸರ್ಕಾರದ ಧೋರಣೆ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ಆರಂಭಿಸಿದೆವು. ನಮ್ಮ ಹೋರಾಟವನ್ನು ಬೆಂಬಲಿಸುತ್ತಾ ನಾಡಿನ ಹಲವಾರು ಪ್ರಜ್ಞಾವಂತರು, ಸಾಹಿತಿಗಳು, ಶಿಕ್ಷಣ ತಜ್ಞರು ಸರ್ಕಾರದ ಕ್ರಮದ ವಿರುದ್ಧ ತಮ್ಮ ದನಿಯೆತ್ತಿದ್ದರು. ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಬದಲಿಸಿ, ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿ ಮತ್ತೊಮ್ಮೆ ನವೆಂಬರ್ ೧, ೨೦೧೧ ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದೆವು.
ಇದರ ಅಂಗವಾಗಿ, ಬೆಂಗಳೂರಿನಲ್ಲೂ ಕೂಡ ಬೃಹತ್ ಕಾಲ್ನಡಿಗೆ ಜಾಥಾ ನಡೆಸಿ, ರಾಜ್ಯಸರ್ಕಾರಕ್ಕೆ ನಮ್ಮ ಮನವಿ ಪತ್ರವನ್ನು ಸಲ್ಲಿಸಿದ್ದೆವು. ಈ ಎಲ್ಲ ಹೋರಾಟಗಳು ಮತ್ತು ನಮ್ಮ ಹೋರಾಟಕ್ಕೆ ಸಿಕ್ಕ ಎಲ್ಲ ಕನ್ನಡಿಗರ ಬೆಂಬಲದ ಫಲವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕ್ರಮವನ್ನು ಕೂಡಲೆ ನಿಲ್ಲಿಸಿ, ಯಥಾಸ್ಥಿತಿಯನ್ನು ಕಾಯಲು ರಾಜ್ಯಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡುವಂತಾಗಿದೆ. ಇದರಿಂದ ಲಕ್ಷಾಂತರ ಕನ್ನಡದ ಮಕ್ಕಳ ಶಿಕ್ಷಣ ಹಕ್ಕನ್ನು ಕಾಪಾಡಿದಂತಾಗಿದೆ. ಇದು ನಾವು ನಡೆಸಿದ ಹೋರಾಟಕ್ಕೆ ಸಂದ ಮತ್ತೊಂದು ಜಯವಾಗಿದೆ, ಎಲ್ಲ ಕನ್ನಡಿಗರ ಜಯವಾಗಿದೆ.
ಈ ವಿಷಯವಾಗಿ ನಾವು ನಡೆಸಿದ ಎಲ್ಲ ಪ್ರತಿಭಟನೆಯ ಪತ್ರಿಕಾ ವರದಿಗಳು ಮತ್ತು ಸರ್ಕಾರಕ್ಕೆ ನಾವು ಸಲ್ಲಿಸಿದ್ದ ಮನವಿ ಪತ್ರದ ವಿವರಗಳನ್ನು ಕೆಳಗಿನ ಕೊಂಡಿಗಳಲ್ಲಿ ನೋಡಿ: http://karnatakarakshanavedike.org/modes/view/207/sarkaari-shaale-muchchuva-nirdhaarada-virudhdha-pratibhatane.html http://karave.blogspot.com/2011/10/sarkaari-shaale-muchchuva-kramada_24.html
http://karave.blogspot.com/2011/11/kannada-shaale-mucchuvike-nov-1.html |