ಕೊಂಕಣಿ ರಾಜ್ಯ ಏಕೀಕಣ್ ಮಂಚ್ ಮತ್ತು ಕಾರವಾರ ಗೊಮಂತರ್ ಮಂಚ್ ಸಂಘಟನೆಗಳು ಕಾರವಾರವನ್ನು ಗೋವ ರಾಜ್ಯಕ್ಕೆ ಸೇರಿಸಬೇಕು ಎಂದು ಹೇಳಿರುವುದರ ವಿರುದ್ಧ ಆ ಸಂಘಟನೆ ಗಳನ್ನು ರಾಜ್ಯ ಸರಕಾರ ನಿಷೇಧಿಸಲು ಮತ್ತು ಗಡಿಭಾಗದ ಹಳ್ಳಿಗಳ ಮತ್ತು ನಗರಗಳ ಅಭಿವೃದ್ಧಿಗೆ ಒತ್ತುನೀಡಿ ವಿಭಜನೆಯ ಕೂಗನ್ನು ದಮನ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ೧೨-೦೭-೨೦೦೭ ರಂದು ಕಾರವಾರದಲ್ಲಿ ನಡೆಸಿದ ಕಾಲ್ನಡಿಗೆ ಜಾಥ ಉತ್ತರ ಕನ್ನಡ ಜಿಲ್ಲೆಯ ಕನ್ನಡಿಗರಿಗೆ ಆತ್ಮಸ್ಥೆರ್ಯ ಹೆಚ್ಚಿಸಲು ಯಶಸ್ವಿಯಾಗಿದೆ.
ಜೂನ್ ೧೨ ರಂದು ಬೆಳಗಿನಿಂದಲೇ ಕಾರವಾರಕ್ಕೆ ಆಗಮಿಸಲು ಪ್ರಾರಂಭಿಸಿದ ಕರವೇ ಕಾರ್ಯಕರ್ತರು ಕನ್ನಡದ ಸೊಗಡನ್ನೇ ಕಳೆದುಕೊಂಡಿದ್ದ ಕಾರವಾರದ ಅಂಗಡಿಗಳಿಗೆ ತೆರಳಿ ಕನ್ನಡ ನಾಮಫಲಕವಿಲ್ಲದ ಅಂಗಡಿ ಮಾಲೀಕರಿಗೆ ತಿಳಿ ಹೇಳಿ, ಅದೇ ಕ್ಷಣದಲ್ಲೇ ಕನ್ನಡ ನಾಮಫಲಕ ಹಾಕಿಸುವಲ್ಲಿ ಯಶಸ್ವಿ ಯಾದರು.
 ಕಾರವಾರದಲ್ಲಿ ನಡೆದ ಕಾಲ್ನಡಿಗೆ ಜಾಥದ ವರದಿ:-
ಕಾರವಾರ ನಗರದ ಗುರುಭವನದಲ್ಲಿ ಸುಮಾರು ೩೦೦೦ ಕರವೇ ಕಾರ್ಯಕರ್ತರನ್ನು ಉದ್ಧೇಶಿಸಿ ಪ್ರಾಸ್ತಾವಿಕ ಭಾಷಣ ಮಾಡಿದ ಉತ್ತರ ಕನ್ನಡ ಜಿಲ್ಲೆ ಕರವೇ ಅಧ್ಯಕ್ಷರಾದ ಅಜಿತ್ ಕುಮಾರ್, ರಾಜ್ಯದ ಎಲ್ಲ ಜಿಲ್ಲೆಯಿಂದ ಕಾರವಾರದ ಕಾಲ್ನಡಿಗೆ ಜಾಥಕ್ಕೆ ಬಂದಿರುವ ಕರವೇ ಕಾರ್ಯಕರ್ತರಿಂದ ತಮಗೆ ಆತ್ಮಶಕ್ತಿ ಹೆಚ್ಚಾಗಿದ್ದು, ಇನ್ನೂ ಹೆಚ್ಚಿನ ಮಟ್ಟದಲ್ಲಿ ಉತ್ತರ ಕನ್ನಡದಲ್ಲಿ ಹೋರಾಟ ನಡೆಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕರವೇ ರಾಜ್ಯಾಧ್ಯಕ್ಷರಾದ ಟಿ. ಏ. ನಾರಾಯಣಗೌಡರು, ಮಹಾರಾಷ್ಟ ಮತ್ತು ಗೋವ ರಾಜ್ಯಗಳು ಗಡಿನಾಡಿನಲ್ಲಿ ವಿಭಜನೆ ಹುನ್ನಾರ ನಡೆಸುತಿದ್ದರೂ ಸುಮ್ಮನಿರುವ ರಾಜ್ಯದ ರಾಜಕಾರಣಿಗಳ ಮನಸ್ಥಿತಿಗೆ ಆತಂಕ ವ್ಯಕ್ತಪಡಿಸಿದರು, ಮತ್ತು ಮುಗ್ದ ಕೊಂಕಣಿಗಳ ಮನಸ್ಸಿನಲ್ಲಿ ವಿಷದ ಬೀಜ ಬಿತ್ತುತ್ತಿರುವ 'ಕಾರವಾರ ಗೊಮಂತರ್ ಮಂಚ್ ಮತ್ತು ಗೊವ ಏಕೀಕರಣ ಮಂಚ್' ಸಂಘಟನೆಗಳು ನಮ್ಮ ನಾಡಿನಲ್ಲೇ ಇದ್ದು ನಮ್ಮ ಬೆನ್ನಿಗೇ ಚೂರಿ ಇರಿಯುತ್ತಿವೆ, ಇಂತಹ ಸಂಘಟನೆಗಳನ್ನು ಸರಕಾರ ನಿಷೇಧಿಸಬೇಕು ಎಂದು ಆಗ್ರಹಿಸಿದರು. ಮಹದಾಯಿ ಯೋಜನೆಗೆ ಕಲ್ಲು ಹಾಕುತ್ತಿರುವ ನಮ್ಮ ಬೆಳಗಾವಿ ಜಿಲ್ಲೆಯಷ್ಟು ವಿಸ್ತೀರ್ಣದ ಗೋವ, ನಾಡಿನ ಜನರ ಮಧ್ಯೆ ಬಿರುಕಿನ ವಾತಾವರಣ ಸೃಷ್ಟಿಸುತ್ತಿದೆ... ಈ ರೀತಿ ನಾಡ ವಿರೋದಿ ಕೆಲಸ ಮಾಡುತ್ತಿರುವ ಜನರಿಗೆ ಕರವೇ ಪಾಠ ಹೇಗೆ ಕಲಿಸಬೇಕು ಎಂದು ತಿಳಿದಿದೆ, ನಾಡವಿರೋಧವನ್ನು ಕರವೇ ಎಂದಿಗೂ ಒಪ್ಪುವುದಿಲ್ಲ, ನಾಡವಿರೋಧಿಗಳಿಗೆ ಪಾಠ ಕಲಿಸೇ ಕಲಿಸುತ್ತದೆ ಎಂದು ಹೇಳಿದರು. ಇದರೊಂದಿಗೆ ಹೋರಾಟ ಎಂಬುದು ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ಹೋರಾಟ ಮುಂದುವರೆಯಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.ಇದೇ ರೀತಿ ಮುಖ್ಯ ಮಂತ್ರಿಗಳನ್ನು ಗಡಿನಾಡಿನಲ್ಲಿ ವಿಭಜನೆಯ ಕೂಗನ್ನು ದಮನ ಮಾಡಲು ಗಡಿನಾಡಿನ ಹಳ್ಳಿಗಳಲ್ಲಿ ಗ್ರಾಮವಾಸ್ತವ್ಯ ಮಾಡಿ ಅಲ್ಲಿನ ಅಭಿವೃದ್ದಿಗೆ ಒತ್ತು ಕೊಡಬೇಕೆಂದು ಆಗ್ರಹಿಸಿದರು.
 ಸಭೆಯ ನಂತರ ಕರವೇ ಕಾರ್ಯಕರ್ತರು ಘೋಷಣೆಗಳ ಮೂಲಕ ಕಾರವಾರದ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿ ಆತ್ಮಸ್ಥೈರ್ಯ ಹೆಚ್ಚಿಸಲು ಊರಿನ ಪ್ರಮುಖ ಬೀದಿಗಳಲ್ಲಿ ಕಾಲು ನಡಿಗೆ ಜಾಥ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾದಿಕಾರಿಗಳಿಗೆ ಮನವಿ ಪತ್ರವನ್ನು ನೀಡಿದರು.
|